ಸ್ಪರ್ಧಾ ವಿಭಾಗ – ಫೆಬ್ರವರಿ-2026

ಈ ಸಂಚಿಕೆಯ ಬಹುಮಾನಿತ ಸ್ಪರ್ಧೆ –

   ”  ಜೀವನದಲ್ಲಿ ನಾವು ಎಷ್ಟು ದುಡಿಯಬೇಕು ? “

ಕೆಲವರು 8 ಗಂಟೆ, 12 ಗಂಟೆ, 16 ಗಂಟೆ ದುಡಿದರೆ, ಮತ್ತೆ ಕೆಲವರು ಕೇವಲ 4 ರಿಂದ 5ಗಂಟೆ ದುಡಿಯುವರು

 ಈ ವಿಷಯದ ಬಗ್ಗೆ  30 ರಿಂದ 40 ಸಾಲು ಬರೆದು ಕಳಿಸಿ. ಉತ್ತಮ ಬರಹಕ್ಕೆ ಬಹುಮಾನ.

 

 

ಇತರ ಸ್ಪರ್ಧೆಗಳು 

1. ಶಾಲಿನಿಯ  ಶಾಲು

ಲೇಖಕರು : ಶ್ರೀಮತಿ ಪದ್ಮ ಆರಾಧ್ಯ 

 ಒಂದೂರಿನಲ್ಲಿ ಒಂದು ವಠಾರದಲ್ಲಿ ಒಬ್ಬಳು ಶಾಲಿನಿಯ ಎಂಬ ಅಧ್ಯಾಪಕಿ ಇದ್ದಳು ಅವಳು ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದಾಗಲಿಲ್ಲ ಒಂದು ನೀಲಿ ಬಣ್ಣದ ಶಾಲನ್ನು ಹೊಂದಿಕೊಂಡು ಹೋಗುತ್ತಿದ್ದಳು ಒಂದು ದಿನವೂ ಶಾಲಿ ಇಲ್ಲದೆ ಹೊರಗೆ ಹೋಗುತ್ತಿರಲಿಲ್ಲ ಕೇಳಿದವರಿಗೆಲ್ಲ ಏನು ಹೇಳದೆ ಸುಮ್ಮನಿರುತ್ತಿದ್ದಳು ಜನರು ಏನಿದರ ಮರ್ಮ ಏನು ಇದೆ ಎಂದು ಕುತೂಹಲದಿಂದ ಯೋಚಿಸುತ್ತಿದ್ದರು . ಹಾಗಾದರೆ ಏನಿರಬಹುದು ಊಹಿಸಿ ನಿಮ್ಮ ಊಹೆಗೆ ನಿಲುಕಿದ ಉತ್ತರವನ್ನು ತಿಳಿಸಿ.

2. ಈ ಪದ್ಯದ ಅರ್ಥ ತಿಳಿಸಿ.

ಲೇಖಕರು : ಶ್ರೀ ಸುಬ್ಬಣ ಆರಾಧ್ಯ 

ಅಶನದಲ್ಲಿ ಶೂರ|

ದಿಶನದಲ್ಲಿ ಧೀರ ||

ನಿದ್ರೆಯಲ್ಲಿ ಕುಂಭಕರ್ಣ|

ಬರಹದಲ್ಲಿ ಬಂಡೆಗಲ್ಲು ||

ಇದರ ಅರ್ಥ ತಿಳಿಸಿ

 

 

ಕಳೆದ ತಿಂಗಳ ಸ್ಪರ್ಧೆಯ ಉತ್ತರಗಳು 

ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯ ನಾರಾಯಣ ರಾವ್ 

 ನನಗೆ ಈಗ 82 ವರ್ಷ ಹಿಂದಿನ ನನ್ನ ಅನುಭವದ ಒಂದೆರಡು ಮಾತು. ನಾಲ್ಕು ಜನ ಅಣ್ಣ ತಮ್ಮಂದಿರ ಮನೆಯವರು, ಗೌರಿ ಗಣೇಶ ಹಬ್ಬವನ್ನು ಐವತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಒಟ್ಟಿಗೆ ಆಚರಿಸುತ್ತಿದ್ದೆವು. ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ಇದ್ದರೂ ಸಹ, ಎಲ್ಲರೂ ಮೂರು ದಿನ ಮುಂಚಿತವಾಗಿ ಬಂದು ಒಟ್ಟಿಗೆ ಹಬ್ಬ ಆಚರಿಸುತ್ತಿದ್ದೆವು. ಕೆಲವು ವರ್ಷಗಳು ಕಳೆದಂತೆ ಎಲ್ಲಾ ಅಣ್ಣ-ತಮ್ಮಂದಿರ ಮನೆಗಳಲ್ಲೂ ಅವರವರ ಸೊಸೆಯಂದಿರು ಮೊಮ್ಮಕ್ಕಳು ಎಲ್ಲಾ ಸೇರಿ 30 ರಿಂದ 40 ಜನರು ಒಟ್ಟಿಗೆ ಪೂಜೆ ಮಾಡುತ್ತಿದ್ದೆವು. ಗೌರಿ ಹಬ್ಬದ ದಿನ ಹೆಣ್ಣು ಮಕ್ಕಳು ಅಲಂಕರಿಸಿಕೊಂಡು ಪೂಜೆಗೆ ಕುಳಿತು ಕೊಳ್ಳುತ್ತಿದ್ದರೆ ನೋಡಲು ತುಂಬಾ ಸಂತೋಷವಾಗುತ್ತಿತ್ತು. ಗಣೇಶ ಹಬ್ಬದ ದಿನ ಚಿಕ್ಕ ಚಿಕ್ಕ ಹುಡುಗರೆಲ್ಲ ಪಂಚೆ ಶಲ್ಯ ಹುಟ್ಟುಕೊಂಡು ಪೂಜೆಗೆ ಕುಳಿತಿರುತ್ತಿದ್ದರು .ಆಗ ಯಾರ ಕೈಯಲ್ಲಿ ಮೊಬೈಲುಇರಲಿಲ್ಲ.( ಆಗ ಇನ್ನೂ ಮೊಬೈಲು ಬಂದಿರಲೇ ಇಲ್ಲ )  ಬದಲಾಗಿ ಹೂವು ಅಕ್ಷತೆ ಕೈಯಲ್ಲಿ ಹಿಡಿದು ಕುಳಿತಿರುತ್ತಿದ್ದರು.

 ಭಕ್ತಿಯಿಂದ ಎಲ್ಲರೂ ಪೂಜೆ ಮಾಡುವುದು, ಮಂತ್ರ ಘೋಷಣೆ ಎಲ್ಲ ತುಂಬಾ ಚೆನ್ನಾಗಿ ಇರುತ್ತಿತ್ತು. ಎಲ್ಲರೂ ಒಟ್ಟಿಗೆ ಕುಳಿತು ಬಾಳೆ ಎಲೆ ಊಟ ಮಾಡುವುದು , ಹಬ್ಬದ ಸಡಗರ ಸಂಭ್ರಮ ಎಲ್ಲಾ ಚೆನ್ನಾಗಿರುತಿತ್ತು .ಹಬ್ಬಕ್ಕೆ ನಾವೇ ಅಡಿಗೆಯನ್ನು ತಯಾರಿಸುತ್ತಿದ್ದೆವು

 ಇನ್ನೊಂದು ವಿಷಯ

 ಸ್ವತಂತ್ರ ದಿನಾಚರಣೆ ,ಗಣರಾಜ್ಯೋತ್ಸವ ಆಚರಣೆಗಳಲ್ಲಿ , ಧ್ವಜಾರೋಹಣ ಕಾರ್ಯಕ್ರಮ ನಮ್ಮ ಮನೆಯಲ್ಲಿಯೇ ನಡೆಯುತ್ತಿತ್ತು. ನನ್ನ ಮೈದುನ ಒಬ್ಬರು ಈ ಕಾರ್ಯಕ್ರಮವನ್ನು ಮನೆಯಲ್ಲಿ ನಡೆಸುತ್ತಿದ್ದರು. ಮನೆಯಲ್ಲಿ ಅವರ ಮಕ್ಕಳು, ನಮ್ಮ ಮಕ್ಕಳು, ರಜಕೆಂದು ಯಾರಾದರೂ ಬಂದಿದ್ದರೆ ಅವರ ಮಕ್ಕಳು ಎಲ್ಲರೂ ಸೇರಿ ಬಾವುಟ ಹಾರಿಸುತ್ತಿದ್ದರು . ಮಕ್ಕಳ ಕೈಯಿಂದಲೇ ಬಾವುಟ ತಯಾರು ಮಾಡಿಸಿ, ಜೊತೆಗೆ ಅವರು ಮಕ್ಕಳೊಂದಿಗೆ ಕುಳಿತು ಎಲ್ಲಾ ವ್ಯವಸ್ಥೆಯನ್ನು ಹಿಂದಿನ ದಿನವೇ ಮಾಡಿರುತ್ತಿದ್ದರು. 

ನಮ್ಮ ಮನೆಯ ಹಾಲಿನಲ್ಲಿ ಒಂದು ದೊಡ್ಡ ಕಪಾಟು ಇತ್ತು. ಗೂಡೆಗೇ  ಅದರ ಬಾಗಿಲಿತ್ತು . ಅದರ ಬಾಗಿಲ ಚಿಲಕಕ್ಕೆ ದಾರ ಕಟ್ಟಿ ಎಳೆದರೆ, ಬಾವುಟ ಮೇಲೆ ಹೋಗುವ ಹಾಗೆ ಹಿಂದಿನ ದಿನ ರಾತ್ರಿ ಸಿದ್ಧ ಮಾಡಿರುತ್ತಿದ್ದರು. ಬೆಳಗ್ಗೆ ಬೇಗ ಎದ್ದು, ಸಂಭ್ರಮದಿಂದ ಆಚರಿಸುತ್ತಿದ್ದರು. ಎಲ್ಲಾ ಹುಡುಗರು, ಮಹಾತ್ಮ ಗಾಂಧೀಜಿ ಜೀ ಕಿ ಜೈ , ಭಾರತ್ ಮಾತಾ ಕಿ ಜೈ ಎಂದು ಮೂರು ಸಲ ಕೂಗಿ, ಚಪ್ಪಾಳೆ ಹೊಡೆಯುತ್ತಿದ್ದರು . ತಿನ್ನಲು ಪುರಿ ಬಿಸ್ಕತ್ ಇತ್ಯಾದಿಗಳನ್ನು ತಂದಿರುತ್ತಿದ್ದರು. ಎಲ್ಲರಿಗೂ ಕೊಟ್ಟು ಅವರುಗಳೂ  ತಿಂದು ಸಂತೋಷದಿಂದ ಕುಣಿದಾಡುತ್ತಿದ್ದರು . ಇದು ಐವತ್ತು ವರ್ಷದ ಹಿಂದಿನ ಮಾತು. ಈ  ವಿಷಯ ಮತ್ತು ಗೌರಿ ಗಣೇಶ ಹಬ್ಬಗಳನ್ನು ಮರೆಯುವಂತೆಯೇ ಇಲ್ಲ.

 ಈಗಿನ ಕಾಲದಲ್ಲಿ ಒಂದು ಮನೆಯಲ್ಲಿ ಐದಾರು ಜನ ಇರುವುದೇ ಅಪರೂಪ. ಇದ್ದರೂ ಎಲ್ಲರೂ ಅವರವರ ಮೊಬೈಲು ಟಿವಿ ಹೀಗೆ ಅವರವರ ಪಾಡಿಗೆ ಇರುತ್ತಾರೆ . ಯಾರೊಂದಿಗೂ ಮಾತಿಲ್ಲ ಎಲ್ಲಿಯಾದರೂ ಸಮಾರಂಭಗಳಲ್ಲಿ ಸಿಕ್ಕಿದರು ಹಾಯ್ ಹೇಳಿ ಮೊಬೈಲ್ ಹಿಡಿದು ಕುಳಿತು ಬಿಡುತ್ತಾರೆ. ಹೀಗಿರುವಾಗ ಎಲ್ಲಿಯ ಕೂಗು ಕುಟುಂಬ? ಜನರೇ ಒಬ್ಬರಿಗೊಬ್ಬರು ಮಾತಿಲ್ಲ. ಮೊಬೈಲೇ ಅವರ ಬಂದು ಬಳಗ .ಇನ್ನು 15 ರಿಂದ 20 ಜನರು ಒಟ್ಟಿಗೆ ಇರುವುದು, ನಮ್ಮ ಕಾಲಕ್ಕೆ ಮಾತ್ರ ಅಷ್ಟೇ .ಈಗಿನ ಕಾಲಕಲ್ಲ ಅಂತ ನನ್ನ ಅಭಿಪ್ರಾಯ ಈಗಲೂ ಎಲ್ಲೋ ಕೆಲವು ಮನೆಗಳಲ್ಲಿ ಇರಬಹುದೊ  ಏನೋ .

ಶ್ರೀಮತಿ ಪದ್ಮ ಆರಾಧ್ಯ 

ಕೂಡು ಕುಟುಂಬ ಅಥವಾ ಅವಿಭಕ್ತ ಕುಟುಂಬ ಎಂದರೆ ಅಣ್ಣ-ತಮ್ಮಂದಿರು. ಕೆಲವೊಮ್ಮೆ ಅಕ್ಕ ತಂಗಿಯರು ಕೂಡಿ ಬಾಳುವುದು. ಸಾಮಾನ್ಯವಾಗಿ ಅಣ್ಣ ತಮ್ಮಂದಿರು ಒಂದೇ ಸೂರಿ ನಡಿಗೆ ಬಾಳುತ್ತಿರುತ್ತಾರೆ. ಈ ಬಾಳ್ವೆಯಲ್ಲಿ ಅನುಕೂಲತೆ ಅನಾನುಕೂಲತೆ ಎರಡು ಇರುತ್ತದೆ. ಆದರೆ ನನ್ನ ಅಭಿಪ್ರಾಯ ಅನಾನುಕೂಲತೆಗಳೇ ಹೆಚ್ಚು ಎಂದು

 ತಾಳ್ಮೆ, ಸಂಯಮ ,ಆವೇಶ, ಕಸಿವಿಸಿ ಎಲ್ಲವನ್ನು ಸಹಿಸಿ ನಡೆದುಕೊಳ್ಳಬೇಕು. ಒಬ್ಬರಿಗೆ ಬೇಕಾಗುವುದು ಮತ್ತೊಬ್ಬರಿಗೆ  ಬೇಡವಾಗುತ್ತೆ. ರುಚಿ, ಶುಚಿ, ಸಂಯಮ, ಸ್ವಚ್ಛತೆ ಒಬ್ಬರಿಂದ ಒಬ್ಬರಿಗೆ ವಿಧವಿಧವಾಗಿರುತ್ತದೆ. ಇದರಿಂದ ಹಿಂಸೆ ಮನಸ್ತಾಪಗಳು ಹೆಚ್ಚುತ್ತವೆ. ಆಸೆ, ಆಕಾಂಕ್ಷೆಗಳು ಮಾಯವಾಗಿ ಮನಸ್ಥಿತಿ ಅಸ್ತವ್ಯಸ್ತವಾಗುತ್ತದೆ. ಒಬ್ಬರು  ನಿರಾಳವಾಗಿ ಹಣ ಖರ್ಚು ಮಾಡಿದರೆ, ಅದೇ ಕುಟುಂಬದ ಇನ್ನೊಬ್ಬ ಸದಸ್ಯರ ಸಂಪಾದನೆ ಕಡಿಮೆ ಇದ್ದು,ಹಣವನ್ನು ನಿಯಮಿತವಾಗಿ ಬಳಸುವಂತಾಗಿ, ಸಂಸಾರದಲ್ಲಿ ಹೊಟ್ಟೆಕಿಚ್ಚು ಹುಟ್ಟಿ, ಕುಟುಂಬದಲ್ಲಿ ಬಿರುಕು ಉಂಟಾಗುತ್ತದೆ. ಸಂಪ್ರದಾಯ, ವೈಯುಕ್ತಿಕ ಶಿಸ್ತಿಗೆ ಕಡಿವಾಣ, ಗೌಪ್ಯತೆಗೆ ಧಕ್ಕೆ ಇವು ಇರುತ್ತವೆ . 

 ಈಗಿನ ಸಮಾಜದಲ್ಲಿ ಅವಿಭಕ್ತ ಕುಟುಂಬ ಬಹಳ ವಿರಳ.ಈಗಿನ ಸಾಮಾನ್ಯ ಬೆಲೆ ಗಗನಕ್ಕೇರಿದೆ. ಅಂದರೆ ಒಬ್ಬರ ದುಡಿಮೆ ಸಂಸಾರಕ್ಕೆ ಸಾಕಾಗುವುದು ಕಷ್ಟಕರ. ಪತಿ, ಪತ್ನಿಯರಿಬ್ಬರೂ ದುಡಿದು ಸಂಸಾರ ನೌಕೆಯಲ್ಲಿ ಇರುವುದರಿಂದ .ಇಬ್ಬರೂ ಹೊರಗೆ ದುಡಿಯಲು ಹೋದರೆ ಅದು ಅವಿಭಕ್ತ ಆಗುವುದಿಲ್ಲ. ಅವಿಭಕ್ತ ಕುಟುಂಬದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಕಾಲೇಜು ಪದವಿ, ಹೊರದೇಶಗಳಲ್ಲಿ ಉದ್ಯೋಗಕ್ಕೆ ಹೋಗುವುದು, ಯಾವುದಕ್ಕೂ ಹೆಚ್ಚು ಅವಕಾಶವಿಲ್ಲದೆ ಬರೀ ಅಡುಗೆ ಮನೆಯಲ್ಲಿಯೇ ಒಂದು ಯಂತ್ರದಂತೆ ಕೆಲಸ ಮಾಡಬೇಕಾಗುತ್ತದೆ.

 ಮಕ್ಕಳ ಭವಿಷ್ಯ, ವೈದ್ಯಕೀಯ, ಎಂಜಿನಿಯರಿಂಗ್ -ಆ ಕನಸು ಕನಸಾಗೇ ಉಳಿಯಬಹುದು. ಏಕೆಂದರೆ ಅವಿಭಕ್ತ ಕುಟುಂಬದ ಅಡುಗೆ ಮನೆಯಲ್ಲಿ ದುಡಿಯುವ  ಹೆಂಗಸರು ಈಗ ಸಿಗುವುದು ಬಹಳ ವಿರಳ. ಒಬ್ಬರು ಮತ್ತೊಬ್ಬರಿಗೆ ಆಗುವುದಿಲ್ಲ. ಬೇಸಿಗೆ ಕಾಲದಲ್ಲಿ ಯಾರು ಯಾರನ್ನು ನಿರೀಕ್ಷಿಸುವುದು ಬಹಳ ವಿರಳ. ಈಗ ಹಬ್ಬ ಹರಿದಿನಗಳು ಸೀಮಿತವಾಗಿಯೇ ನಡೆಯುತ್ತವೆ. ಅವಿಭಕ್ತ ಕುಟುಂಬ, ಕ್ರಿಕೆಟ್ ಆಟ, ಸಿನಿಮಾ ಎಲ್ಲಾ ಸೀಮಿತವಾಗಿವೆ. ಇದರಲ್ಲಿ ವೈಯುಕ್ತಿಕ ಆಸೆ ಆಕಾಂಕ್ಷೆಗಳಿಗೆ ಅವಕಾಶವಿರುವುದಿಲ್ಲ. ಸ್ವತಂತ್ರ್ಯಕ್ಕೆ ಬರುತ್ತದೆ. ನನ್ನ ಅಭಿಪ್ರಾಯ, ಅವಿಭಕ್ತ ಕುಟುಂಬದಿಂದ ಸ್ವಾತಂತ್ರ್ಯ, ಸಂತೋಷ ಎಲ್ಲವನ್ನು ತ್ಯಾಗ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಅವಿಭಕ್ತ ಕುಟುಂಬ ಈಗಿನ ಜನಜೀವನದ  ವಾತಾವರಣ, ಸಾಮಾಜಿಕ ಹೊಣೆ, ಸ್ಪರ್ಧಾತ್ಮಕ ಜೀವನ, ವೈಜ್ಞಾನಿಕ ಬೆಳವಣಿಗೆಗೆ ಎಲ್ಲದಕ್ಕೂ ಧಕ್ಕೆಯಾಗಿದೆ. ಈಗಿನ ವೈಜ್ಞಾನಿಕ ಯುಗದಲ್ಲಿ ಹೊಸ ಆವಿಷ್ಕಾರಕ್ಕೆ ಪ್ರೋತ್ಸಾಹ ಹುರಿದುಂಬಿಸುವುದು, ಮುಖ್ಯವಾಗಿ ಹೆಣ್ಣು ಮಕ್ಕಳಿಗಂತೂ ಅವಿಭಕ್ತ ಕುಟುಂಬದಲ್ಲಿ ಇರುವುದಿಲ್ಲ.

ಆದ್ದರಿಂದ ಅವಿಭಕ್ತ ಕುಟುಂಬದಲ್ಲಿ ಅನಾನುಕೂಲಗಳೇ ಹೆಚ್ಚು ಎಂಬುದು ನನ್ನ ಅಭಿಪ್ರಾಯ.

ಶ್ರೀ ಆನಂದ್ ಎಸ್ ಬಿ 

“ಕೂಡು ಕುಟುಂಬವೆಂಬ ಕಜ್ಜಾಯ”

ಐದು ದಶಕಗಳ ಹಿಂದೆ, ಹನುಮಂತನಗರದ ಹೃದಯಭಾಗದಲ್ಲಿ ಉದಯಿಸಿದವರು ನಾವು:

558,ಮೊದಲನೆ ಅಡ್ಡ ರಸ್ತೆ, ಮೊದಲನೆ ಮುಖ್ಯ ರಸ್ತೆಯಲ್ಲಿತ್ತು

ಹನುಮಂತನಗರ ಬೆಂಗಳೂರು ಹತ್ತೊಂಬತ್ತು

ಆಗಿನಕಾಲಕ್ಕೆ  ದೇವಮೂಲೆಯಲ್ಲಿತ್ತು 

ನಮ್ಮ ಮನೆ. “ಚೈತನ್ಯ ನಿಲಯ”

ಚೈತನ್ಯದ ಚಿಲುಮೆಯಾಗಿದ್ದರು ಒಲುಮೆಯ ಅಣ್ಣಯ್ಯ

ಎರಡು ಕೋಣೆಯ ಪುಟ್ಟ ಮನೆ, ಒಂದೆ ಬಚ್ಚಲುಮನೆ,

ಒಂದೇ ಪಾಯಿಖಾನೆ, ವಾಸಿಸುತ್ತಿದ್ದದ್ದು15 ರಿಂದ 18 ಜನ!

ಎಂದಿಗೂ ಇರುತ್ತಿರಲಿಲ್ಲ ಕೋಪ ಕದನ.

ಚೈತನ್ಯ ನಿಲಯ,ಸೌರಮಂಡಲ,ಅಣ್ಣಯ್ಯ ಸೂರ್ಯ

ಮಕ್ಕಳು ನವಗ್ರಹ ,ಮೊಮ್ಮಕ್ಕಳು ಉಪಗ್ರಹ

ಮೀನಾಅಜ್ಜಿ ಮಿನುಗುವ ದೃವತಾರೆ

ನಮ್ಮ ಕೂಡು ಕುಟುಂಬದ ಕಣ್ಮಣಿ ಅಣ್ಣಯ್ಯರಾಗಿದ್ದರು

ಕೂಡು ಕುಟುಂಬದಲ್ಲಿ ಆರೈಕೆ ಹಾರೈಕೆ ಪೂರೈಕೆಗೆ ಆದ್ಯತೆಯಿರುತ್ತಿತ್ತು

ಮೂರು ಚೊಂಬಲಿ ಸ್ನಾನ ಮುಗಿಸಬೇಕಿತ್ತು

ಮೂರು ಬಟ್ಟೆಲಿ ದಿನ ಕಳೆಯಬೇಕಿತ್ತು

ಕೂಡು ಕುಟುಂಬದಲ್ಲಿತ್ತು ಮಮತೆಯ ಕೈತುತ್ತು

ನಮಗೆ ಓದು,ಆಟ ಮನೆಗೆಲಸಕ್ಕೆ ಒತ್ತಿತ್ತು

ನಿತ್ಯೋಪಹಾರಕ್ಕಿರುತ್ತಿತ್ತು ಅವಲಕ್ಕಿ-ಉಪ್ಪಿಟ್ಟು 

ಹಬ್ಬಗಳಿಗಿರುತ್ತಿತ್ತು ಬೇಳೆಬಾತ್-ಒಬ್ಬಟ್ಟು 

ನಿತ್ಯ ಅತಿಥಿಗಿರುತ್ತಿತ್ತು ಕಾಫಿ-ಬಿಸ್ಕತ್ತು

ಮಕ್ಕಳಿಗೆ ಸವಿಯುವುದಕ್ಕೆ ಬ್ರೆಡ್ಡು-ರಸ್ಕಿತ್ತು

ಕೂಡು ಕುಟುಂಬದಲ್ಲಿ ಹಿರಿಯರು ದಂಡಿಸುತ್ತಿದ್ದರೂ, 

ಕಿರಿಯರು ವಂದಿಸುತ್ತಿದ್ದರು.

ಹಿರಿಯರಲ್ಲಿರುತ್ತಿತ್ತು ಭಯ ಭಕ್ತಿ 

ಕಿರಿಯರಿಗೆ ಸಿಗುತ್ತಿತ್ತು ಅಭಯ ಶಕ್ತಿ.

ಇದ್ದೇವು ಹತ್ತಾರು,ಬಂದರು ಮತ್ತಾರು, 

ಹೆತ್ತವರ ಜೊತೆ ಇದ್ದರು ಹೊತ್ತವರು. 

ಇತ್ತಿವರು ಅತ್ತವರು

ಭಗವಂತನಿಗೇ ಬಿಡುವು ಕೊಟ್ಟವರು.

ಸುಪ್ರಭಾತದಿಂದ ಶುಭರಾತ್ರಿಯವರೆಗೂ ಇರುತ್ತಿತ್ತು

ಸುಖ,ಸಂತೋಷ,ಸಮಾಧಾನ ಸಂತೃಪ್ತಿ

ಇಲ್ಲಿಗೆ ಕೂಡು ಕುಟುಂಬದ ನೆನಪು ಸಮಾಪ್ತಿ

“ಕೂಡಿಬಾಳಿದರೆ ಸ್ವರ್ಗ ಸುಖ ,ಓಡಿಹೋದರೆ ನರಕ ದುಃಖ”

ತರಂಗಾಂತರಂಗ 

ಲೇಖಕರು : ಶ್ರೀಮತಿ ಸೌಮ್ಯ ನಾಗರಾಜ್ 

ಅವಿಭಕ್ತ ಕುಟುಂಬದ ಬಗ್ಗೆ ನನ್ನ ಅಣ್ಣ ಏ. ಎಸ್. ಜಯರಾಮ್ ಬರೆದ ಲೇಖನ ತುಂಬಾ ಚೆನ್ನಾಗಿ ಬಂದಿದೆ. ಅದನ್ನು ಓದಿದಾಗ ನನ್ನ ಮನಸ್ಸಿನಲ್ಲಿ ಬಾಲ್ಯದ ಅನೇಕ ನೆನಪುಗಳು ಹಾದುಹೋದವು. ಅವುಗಳಲ್ಲಿ ಕೆಲವನ್ನು ಹಂಚಿಕೊಳ್ಳುತ್ತಿದ್ದೇನೆ. 

    ನಮ್ಮ ತಾತನವರ ಮನೆಯಲ್ಲಿ ನಾವೆಲ್ಲ ಒಟ್ಟಿಗೆ ನಮ್ಮ ತಂದೆಯವರ ಸಂಸಾರದ ಜೊತೆ ನಮ್ಮ ಚಿಕ್ಕಪ್ಪಂದಿರ ಕುಟುಂಬಗಳು ನಮ್ಮ ಅಜ್ಜಿ ತಾತ ಮತ್ತು ಸೋದರತ್ತೆಯರು (ಅವರುಗಳ ಮದುವೆಗೆ ಮುಂಚೆ) ಹೀಗೆ ಸುಮಾರು 14-15 ಜನ ಇದ್ದೆವು. 

 ಆ ಮನೆಗೆ ನಮ್ಮ ತಾತನವರೇ ಯಜಮಾನ ಹಾಗೂ ವಿತ್ತ ಮಂತ್ರಿ. ಎಲ್ಲ ಮಕ್ಕಳ ಸಂಪಾದನೆಯೂ ತಾತನ ಖಜಾನೆಯಲ್ಲಿ ಒಟ್ಟಾಗಿ ಅಲ್ಲಿಂದ ನಮ್ಮ ಗೃಹಮಂತ್ರಿಯಾದ ಅಜ್ಜಿಯವರೊಂದಿಗೆ ಸಮಾಲೋಚನೆಯ ನಂತರ ಉತ್ತಮ ರೀತಿಯಲ್ಲಿ ವಿತರಣೆಯಾಗುತ್ತಿತ್ತು. ಮನೆಯ ಎಲ್ಲರೂ(ನಮ್ಮತಾತನೂ ಸೇರಿ) ನಮ್ಮ ಅಜ್ಜಿ ಹೇಳಿದಂತೆ ಕೇಳುತ್ತಿದ್ದೆವು. ಕಾರಣ ಅವರು ಮಹಾ ಬುದ್ಧಿವಂತೆ! ಬಹಳ ಚಾಣಾಕ್ಷತೆಯಿಂದ ಸಂಸಾರವನ್ನು ತೂಗಿಸುತ್ತಿದ್ದರು. 

   ಮನೆಯಲ್ಲಿ ಸಾಮಾನ್ಯವಾಗಿ ಶಾಂತ ವಾತಾವರಣವಿರುತ್ತಿತ್ತು. ಅಪರೂಪಕ್ಕೆ ನಮ್ಮ ಅಜ್ಜಿ, ತಾತನ ನಡುವೆ ಮಾತಿನ ಚಕಮಕಿ ನಡೆದು ತಾರಕಕ್ಕೆ ಏರಿದರೆ ನಮ್ಮ ಚಿಕ್ಕಪ್ಪ ಬಂದು ರೇಡಿಯೋದ ಸ್ವರವನ್ನು ಏರಿಸಿ ಹೋಗುತ್ತಿದ್ದರು. (ಅಕ್ಕಪಕ್ಕದವರಿಗೆ ತೊಂದರೆ ಆಗಬಾರದೆಂದಲ್ಲ. ಅವರಿಗೆ ಜಗಳದ ಬಗ್ಗೆ ಸ್ಪಷ್ಟತೆ ಸಿಗದಿರಲೆಂದು!😀) ಈಗ ನೆನೆಸಿಕೊಂಡರೆ ನಗು ಬರುತ್ತದೆ. ಇದು ಬಹಳ ತಾತ್ಕಾಲಿಕ. ಆಮೇಲೆ ಏನೂ ಆಗಿಲ್ಲವೆಂಬಂತೆ ಇಲ್ಲ ಸಾಮಾನ್ಯವಾಗುತ್ತಿತ್ತು. 

  ವರ್ಷಗಳು ಕಳೆದಂತೆ ನಮ್ಮ ಚಿಕ್ಕಪ್ಪನ, ಸೋದರತ್ತೆಯರ ಮದುವೆಗಳಾದವು. ಆಗೆಲ್ಲ ಹುಡುಗಿ ನೋಡಲು ಗಂಡಿನ ಕಡೆಯವರು ಬಂದರೆ ಏನೋ ಸಡಗರ. ಅಲ್ಲಿ ಇಲ್ಲಿ ಎಳೆದಾಡಿಸಿಕೊಳ್ಳುತ್ತಿದ್ದ ಕಬ್ಬಿಣದ ಕುರ್ಚಿಗಳಿಗೆ ಎಲ್ಲಿಲ್ಲದ ಆದರ. ಅವುಗಳ ಮೇಲೆ ಮೆತ್ತನೆಯ ದಿಂಬು ಹಾಗೂ ಹೆಂಗಸರು ಚಿತ್ತಾರವಾಗಿ ಕಸೂತಿ ಹಾಕಿದ ಕವರ್ಗಳಿಂದ ಅಲಂಕಾರಗೊಳ್ಳುತ್ತಿದ್ದವು. ದೊಡ್ಡ ಪಾತ್ರೆಯಲ್ಲಿ ಸ್ಪೆಶಲ್ ಉಪ್ಪಿಟ್ಟು ತಯಾರಾಗುತ್ತಿತ್ತು. ಹಾಗೆಯೇ ಫಿಲ್ಟರ್ ಕಾಫಿ ಕೂಡ. ಬಂದವರು ನಾಲ್ಕೆ ಜನ ಆದರೂ ಮನೆಯವರಿಗೆಲ್ಲ ಆಗಬೇಕಲ್ಲ!

ಅವರೆಲ್ಲ ಬಂದು ಹೋಗುವವರೆಗೂ ಗಲಾಟೆ ಮಾಡದೇ ಸುಮ್ಮನೆ ಕೋಣೆಯಲ್ಲಿ ಕೂತಿರಬೆಂದು ನಮಗೆ ಮೊದಲೇ ತಾಕೀತಾಗಿರುತ್ತಿತ್ತು. ಕೋಣೆಯ ಬಾಗಿಲ ಸಂದಿನಿಂದ ಎಷ್ಟು ಜನ ಬಂದಿದ್ದಾರೆ ಅವರಲ್ಲಿ ಮದುವೆ ಗಂಡು ಯಾರು? ಹೇಗಿದ್ದಾರೆ ಎಂದೆಲ್ಲ ವಿಷಯ ಚರ್ಚಿಸುವುದರಲ್ಲಿ ನಮಗೆ ಮಜಾ ಸಿಗುತ್ತಿತ್ತು. ಆಮೇಲೆ ಘಮಘಮಿಸುವ ಸ್ಪೆಷಲ್ ಉಪ್ಪಿಟ್ಟು ತಿನ್ನುವುದು!(ಇವಾಗ ಮಕ್ಕಳು ಉಪ್ಪಿಟ್ಟೆಂದರೆ ಮೂಗೆಳೆಯುತ್ತಾರೆ. ಆಗ ಅದೇ ನಮಗೆ ಸ್ಪೆಷಲ್ ತಿಂಡಿ! )

  ನಮ್ಮ ಸೋದರತ್ತೆಯರು ಬಾಣಂತನಕ್ಕೆ ಬರುವುದು, ಬಂಧು ಬಂದವರು ಬಂದು ದಿನಗಟ್ಟಲೆ ಇದ್ದು ಹೋಗುವುದು ಎಲ್ಲ ಸರ್ವೇಸಾಮಾನ್ಯ. 

 ಮೈಸೂರಿನಲ್ಲಿದ್ದ ನಮ್ಮ ಸೋದರತ್ತೆಯ ಸಂಸಾರ (6 ಜನ) ಬಂದರೆ ನಮಗೆಲ್ಲ ಬೇಸಿಗೆ ರಜೆ 2 ತಿಂಗಳು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಅವರು ಎಲ್ಲರಿಗೂ ನೀಟಾಗಿ ಜಡೆ ಹೆಣೆಯುತ್ತಿದ್ದರು. ಒಟ್ಟಿಗೆ ಕೂತು ಕೈತುತ್ತು ತಿನ್ನುವ ಮಜವೇ ಬೇರೆ!

  ಅವಿಭಕ್ತ ಕುಟುಂಬದಲ್ಲಿ ತೊಂದರೆ ಇಲ್ಲವೆಂದಲ್ಲ. ಹಿರಿಯರೂ ಕಿರಿಯರೂ ಬಹಳಷ್ಟು ಕಷ್ಟಗಳನ್ನು ಅನುಭವಿಸಿರುತ್ತಾರೆ. ತ್ಯಾಗಗಳನ್ನು ಮಾಡಿರುತ್ತಾರೆ. ಆ ರೀತಿಯ ಬದುಕಿನಲ್ಲಿ ಬೇಕಾದಷ್ಟು ನ್ಯೂನತೆಗಳಿರುತ್ತವೆ. ವೈಯಕ್ತಿಕ ಗೌಪ್ಯತೆ (privacy), ನಮ್ಮದೇ ಆದ ಬಿಡುವಿನ ಸಮಯ(personal space) ಎಂದೆಲ್ಲ ಈಗಿನ ಕಾಲದ ಪದಗಳಿಗೆ ಆಗ ಆಸ್ಪದವೇ ಇರುತ್ತಿರಲಿಲ್ಲ. ಎಲ್ಲ ಖುಲ್ಲಂ ಖುಲ್ಲಾ. ಏನನ್ನೂ ಮುಚ್ಚಿಟ್ಟುಕೊಳ್ಳಲು ಆಗುತ್ತಿರಲಿಲ್ಲ. ಸಣ್ಣ ಪುಟ್ಟ ಮನಸ್ತಾಪಗಳು, ಹಣಕಾಸಿನ ಮುಗ್ಗಟ್ಟು, ಪರೀಕ್ಷೆ ಸಮಯದಲ್ಲೂ ಮನೆ ತುಂಬಾ ಜನ ಗಲಾಟೆ, ಎಲ್ಲ ಬಂದಾಗ ಬೇಸರವಾಗುತ್ತಿತ್ತು. ಆದರೆ ಪರಸ್ಪರರ ಗಟ್ಟಿ ಬಾಂಧವ್ಯ ಇದನ್ನೆಲ್ಲ ಮೀರಿಸುತ್ತಿತ್ತು. ಇದಕ್ಕೆಲ್ಲ ಕಾರಣ ಮನೆಯ ಹೆಂಗಸರ ಅಪಾರ ಸಹನೆ, ತಾಳ್ಮೆ, ಹಾಗೂ ಗಂಡಸರ (ಅಣ್ಣತಮ್ಮಂದಿರ) ನಡುವಿನ ಪರಸ್ಪರ ಪ್ರೀತಿ ಗೌರವ. 

 ಯಾರು ಯಾರ ಮಕ್ಕಳಿಗೆ ಬೇಕಾದರೂ ಊಟ ಮಾಡಿಸಬಹುದು, ಅಂಗಿ ತೊಡಿಸಬಹುದು, ಪಾಠ ಹೇಳಿಕೊಡಬಹುದು, ಬೈದು ಬುದ್ಧಿ ಹೇಳಬಹುದು. ಯಾರೂ ತಪ್ಪಾಗಿ ತಿಳಿಯುತ್ತಿರಲಿಲ್ಲ!

ಅವಿಭಕ್ತ ಕುಟುಂಬ ಮಕ್ಕಳಿಗೆ ಒಂದು ದೊಡ್ಡ ಗುರುಕುಲದಂತೆ!

  ಈಗಿನ ಕಾರ್ಪೊರೇಟ್ ಯುಗದಲ್ಲಿ ಕಂಪೆನಿ ಗಳಲ್ಲಿ ಟೈಮ್ ಮ್ಯಾನೇಜ್ಮೆಂಟ್, ಸ್ಕಿಲ್ ಡೆವಲಪ್ಮೆಂಟ್ ಅಂತ ಏನೆಲ್ಲ ತರಬೇತಿ ಕೊಡುತ್ತಾರೋ ಅದಷ್ಟೇ ಅಲ್ಲದೆ – ಸಹನೆ, ತ್ಯಾಗ, ತಪ್ಪುಗಳನ್ನು ಕ್ಷಮಿಸಿ ಮರೆತು ಮುಂದೆ ಹೋಗುವುದು, ಧನಾತ್ಮಕ ಚಿಂತನೆ,(ಋಣಾತ್ಮಕ ಚಿಂತನೆಗೆ ಮುಖ್ಯ ಕಾರಣವಾದ ಏಕಾಂಗಿತನಕ್ಕೆ ಜಾಗ ಸಮಯ ಎರಡೂ ಇರುತ್ತಿರಲಿಲ್ಲ!) ಎಲ್ಲ ಪಾಠ ಪ್ರಾಯೋಗಿಕವಾಗಿ ಮನೆಯಲ್ಲೇ ಸಿಗುತ್ತಿತ್ತು. 

   ಇಂದಿನ ಕಾಲದಲ್ಲಿ ಅದು ಸರಿ ಹೋಗುವುದಿಲ್ಲವೆಂದಲ್ಲ. ಇವತ್ತಿನ ವೇಗದ ಜೀವನಕ್ಕೆ ಆಗಿನ ಕಾಲದ ಹಾಗೆ ಒಟ್ಟಾಗಿ ಕುಳಿತು ಮಾತಾಡುವ ಸಮಸ್ಯೆ ಬಗೆಹರಿಸುವ, ಹೊಂದಾಣಿಕೆ ಮಾಡಿಕೊಂಡು ಹೋಗುವ ಸಮಯವಿಲ್ಲ. ಈಗಿನ ಮಕ್ಕಳಿಗೆ ಹೊರ ಜಗತ್ತಿನ ಸವಾಲುಗಳು ಸುಲಭವಾಗಿಲ್ಲ. ನಮ್ಮ ಹಾಗೆ ಸಣ್ಣ ಜಾಗದಲ್ಲಿ ಕೆಲವೇ ಪುಸ್ತಕಗಳಿಟ್ಟುಕೊಂಡು ಓದಲು ಆಗುವುದಿಲ್ಲ. ಎಲ್ಲದಕ್ಕೂ ಕಂಪ್ಯೂಟರ್ ಬೇಕು. ಹಾಗೇ ದೊಡ್ಡವರಿಗೂ ಕೆಲಸದ ಒತ್ತಡ ಅಪಾರ. ಮನೆಯ ವಾತಾವರಣ ಶಾಂತವಾಗಿದ್ದರೆ ಅವರ ಓದಿನ ಅಥವಾ ಕೆಲಸದ ಒತ್ತಡಗಳನ್ನು ಎದುರಿಸುವುದಕ್ಕೆ ಸಾಧ್ಯವಾಗುತ್ತದೆ. ಹಾಗೇ ಇನ್ನೂ ಅನೇಕ ಅನಿವಾರ್ಯ ಕಾರಣಗಳಿಂದ ಅವಿಭಕ್ತ ಕುಟುಂಬದ ಬದಲಾಗಿ ವಿಭಕ್ತ ಕುಟುಂಬದಲ್ಲೇ ಇದ್ದುಕೊಂಡು ಹಬ್ಬ ಮುಂತಾದ ವಿಶೇಷ ದಿನಗಳಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಾ ಒಬ್ಬರಿಗೊಬ್ಬರು ಪ್ರೀತಿ, ಗೌರವ ತೋರಿಸುತ್ತಾ ಬೇಕೆಂದಾಗ ಎಲ್ಲ ರೀತಿಯ ಸಹಾಯಕ್ಕೂ ಒಟ್ಟಾಗುವ ಇಂದಿನ ಪೀಳಿಗೆಯ ಜೀವನ ಶೈಲಿಯನ್ನು ಒಪ್ಪಿಕೊಳ್ಳುವ ಮನಸ್ಸು ನಮ್ಮ ಪೀಳಿಗೆಗೆ ಇದೆಯೆಂದು ನಂಬುತ್ತೇನೆ. 

   ಈ ವಿಷಯದ ಬಗ್ಗೆ ಬರೆದಷ್ಟೂ ಬರೆಯಬೇಕೆನಿಸುತ್ತೆ. ನಮ್ಮ ಕಾಲದಲ್ಲಿದ್ದ ಕುಟುಂಬ, ಒಬ್ಬರಿಗೊಬ್ಬರು ಸಹಾಯಕ್ಕೆ ನಿಲ್ಲುತ್ತಿದ್ದ ರೀತಿ, ನಮ್ಮ ಅಜ್ಜಿಯವರು ನಿತ್ಯ ತರಕಾರಿ ಹೆಚ್ಚುತ್ತಾ ದಿನಕ್ಕೊಂದರಂತೆ-ಸೋಮವಾರ ಶಿವಾಪರಾಧ ಸ್ತುತಿ ಯಿಂದ ಶುರುವಾಗಿ ಶನಿವಾರ ವೆಂಕಟೇಶ ಸುಪ್ರಭಾತದವರೆಗೆ ಹೇಳುತ್ತಿದ್ದುದು (ಇವೆಲ್ಲ ಅವರಿಗೆ ಕಂಠಪಾಠವಾಗಿತ್ತು!), ನಮ್ಮ ತಾತ ರಸವತ್ತಾಗಿ ರಾಮಾಯಣ ಮಹಾಭಾರತ ಮುಂತಾದ ಕಥೆಗಳನ್ನು ಹೇಳುತ್ತಿದ್ದುದು, ನಮ್ಮ ಅಮ್ಮ ಚಿಕ್ಕಮ್ಮಂದಿರ ಅಡುಗೆಗಳ ರುಚಿ, ಶುಕ್ರವಾರದ ಲಕ್ಷ್ಮಿ ಪೂಜೆ, ಏನೇ ಮಾತಾಗಲಿ ಹಿರಿಯಣ್ಣನಾದ ನಮ್ಮ ತಂದೆ ಹಾಗೂ ನಮ್ಮ ತಾಯಿಗೆ ಎಲ್ಲರೂ ಗೌರವ ಕೊಡುತ್ತಿದ್ದ ರೀತಿ, ನಮ್ಮ ಚಿಕ್ಕಪ್ಪನವರ ನಿತ್ಯದ ಪೂಜೆಯನ್ನು ನೋಡಿ ಕೇಳಿ ಎಲ್ಲ ಮಂತ್ರಗಳು ನಮಗೆ ಬಾಯಿಪಾಠವಾಗುತ್ತಿದ್ದುದು, ನಮ್ಮ ಚಿಕ್ಕಪ್ಪ ಚಿಕ್ಕಮ್ಮ ಫಸ್ಟ್ ಟೈಮ್ ಕ್ಲಿನಿಕ್ ಆರಂಭಿಸಿದ್ದು, ಗೌರಿ ಗಣೇಶನ ಹಬ್ಬಕ್ಕೆ ನಮ್ಮ ಇನ್ನೊಬ್ಬರು ಚಿಕ್ಕಪ್ಪನ ಸಂಸಾರವೂ ಬಂದು ಎಲ್ಲರೂ ಒಟ್ಟಾಗಿ ಸಡಗರದಿಂದ ಹಬ್ಬ ಆಚರಿಸುತ್ತಿದ್ದುದು, ಮನೆಯವರೆಲ್ಲ  ಒಟ್ಟಾಗಿ ರಾತ್ರಿ ಊಟವಾದ ಮೇಲೆ ಯಾವುದಾದರೂ ವಿಷಯ ಚರ್ಚಿಸುತ್ತಿದ್ದುದು (ಹೆಚ್ಚು ಕಡಿಮೆ 15-20 ಸಲ ಕಾಶಿಗೆ ಮುಂದಿನ ವಾರವೇ ಹೋಗುತ್ತೇವೇನೋ ಎನ್ನುವಷ್ಟು ಪ್ಲಾನಿಂಗ್ ಆಗಿದೆ!), ಹೀಗೆ ನೆನಪುಗಳು ಅಲೆಗಳಂತೆ ಬರುತ್ತಲೇ ಇರುತ್ತವೆ. 

    ನನ್ನ ಅಂತರಂಗದ ನೆನಪಿನ ತರಂಗಗಳಲ್ಲಿ ಕೆಲವನ್ನು ಹೇಗೆ ಬಂತೋ ಹಾಗೆಯೇ ನಿಮ್ಮೆಲರೊಂದಿಗೆ ಹಂಚಿಕೊಂಡಿದ್ದೇನೆ. 

 ಧನ್ಯವಾದಗಳು 🙏

ಸೂಚನೆ : ಬರೆಯಬೇಕಾಗಿದ್ದುದು ಅಭಿಪ್ರಾಯ . ಅನೇಕರು ಅನುಭವಗಳನ್ನು ಬರೆದಿದ್ದೀರಿ. ಅನುಭವದ ಜೊತೆಗೆ , ಜಾಸ್ತಿ ಅಭಿಪ್ರಾಯ ಬರೆದು, ಬಹುಮಾನಗಳಿಸಿದವರು; 

ಶ್ರೀಮತಿ ಪದ್ಮ ಆರಾಧ್ಯ 

ಆವರಿಗೆ  ಅಭಿನಂದನೆಗಳು.

ತಾತಪ್ಪನ ತಲೆದಿಂಬು ಕಥೆಯ ಉತ್ತರಗಳು 

ಲೇಖಕರು : ಶ್ರೀಮತಿ ರಾಜೇಶ್ವರಿ  ನಾಗರಾಜ್ 

ತಾತನ ಕಾಲದಲ್ಲಿ ಹಣವನ್ನು ಬ್ಯಾಂಕಿನಲ್ಲಿ ಇಡುವುದು ತಿಳಿದಿರಲಿಲ್ಲ ಅಜ್ಜಿ ಸಾಸಿವೆ ಡಬ್ಬದಲ್ಲಿ ಇಟ್ಟರೆ ತಾತ ತಲೆದಿಂಬಿನ ಅಡಿಯಲ್ಲಿ ಸೇರಿಸುತ್ತಿದ್ದರು ಅವರ ಆದಿಂಬನ್ನು ಎಲ್ಲಿ ಹೋದರು ತಮ್ಮೊಡನೆ ಒಯ್ಯುತ್ತಿದ್ದರು ಎಲ್ಲರಿಗೂ ದಿಂಬಿನ ರಹಸ್ಯ ತಿಳಿದಿರಲಿಲ್ಲ ಸೇರಿಸಿ ಬಿಟ್ಟಿದ್ದರು ನಮ್ಮ ತಂದೆಯವರು ನಮ್ಮ ದೊಡ್ಡಪ್ಪನವರು ಸಹ ಇದೇ ರೀತಿ ಹಣವನ್ನು ಸೇರಿಸಿ ಇಡುತ್ತಿದ್ದರು ಒಮ್ಮೆ ನಾನು ನಮ್ಮ ಅಕ್ಕನನ್ನು ಕೇಳಿದ್ದಕ್ಕೆ ಅದು ನಿನಗೆ ಬೇಡ ನೀನು ಸಂಪಾದಿಸಿ ಎಂದು ಬಿಟ್ಟರು.

 ನಮ್ಮಪ್ಪನನ್ನು ಪಶುಲಾಯಿಸಿದಾಗ ಅವರು ತಮ್ಮ ಅಂತ್ಯಕಾಲದಲ್ಲಿ ಹಣವನ್ನು ಉಪಯೋಗಿಸಲು ಇಚ್ಛಿಸುತ್ತಿದ್ದರು. ಪರರ ಹಣದಿಂದ ಕರ್ಮಂತರ ಮಾಡಿದರೆ ಮತ್ತೆ ಅವರ ಋಣ ತೀರಿಸಲು ಮರಜನ್ಮವೆತ್ತಬೇಕು ನಮಗೆ ಮೋಕ್ಷ ಸಿಗಬೇಕಾದರೆ ನಮ್ಮ ಹಣವನ್ನೇ ಬೇಯಿಸಬೇಕೆಂದು ಅವರ ನಂಬಿಕೆ ಆದುದರಿಂದ ತಾತ ಎಲ್ಲಿ ಹೋದರು ತಮ್ಮ ದಿಂಬನ್ನು ಒಯ್ಯುತ್ತಿದ್ದರು ಇದೇ ದಿಂಬಿನ ರಹಸ್ಯ.

ಉತ್ತಮ ಬರಹಕ್ಕಾಗಿ ಶ್ರೀಮತಿ ರಾಜೇಶ್ವರಿ  ನಾಗರಾಜ್  ಅವರಿಗೆ ಅಭಿನದನೆಗಳು  

  ನಾನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ  ಉತ್ತರ ಹೀಗಿತ್ತು- ಜಯರಾಂ ಎ ಎಸ್ 

ಅಜ್ಜಿ- ತಾತ ಅವರು  ವಿಮಾನವನ್ನು ಹತ್ತಿದಾಗ  ಅಲ್ಲಿ ಸೆಕ್ಯೂರಿಟಿಯವರು,  ಇವರನ್ನು ನಿಲ್ಲಿಸಿದರು. 

“ಆ ದಿಂಬಿನಲ್ಲಿ ಏನೋ ಇದೆ, ನಮ್ಮ ಉಪಕರಣ ಸಾದು ಮಾಡಿ ತಿಳಿಸುತ್ತಿದೆ. ಅದನ್ನು ತೆಗೆದು ತೋರಿಸಿ”  ಎಂದು ಹೇಳಿದರು, ಆಗ ತಾತನ ಮುಖದಲ್ಲಿ ಗೊಂದಲ ಉಂಟಾಯಿತು . ಅಜ್ಜಿಗೆ ಕುತೂಹಲ, ಅದೇನಿರಬಹುದೆಂದು ಈಗಲಾದರೂ ಗೊತ್ತಾಗುತ್ತದೆ ಎಂದು ಕೊಂಡರು. ಕೊನೆಗೆ ಅದನ್ನು ತೆಗೆದು ತೋರಿಸಿದಾಗ ಅದರಲ್ಲಿ ಒಂದು ತೇಜೋರಿಯ ಕೀಲಿ ಕೈ ಇರುವುದು ತಿಳಿಯಿತು. ಆಗ ಸೆಕ್ಯೂರಿಟಿಯವರು ಅದನ್ನು ತಾತನ  ಜೋಬಿನಲ್ಲಿಟ್ಟು, ಡಿಂಬನ್ನೂ ಕೊಟ್ಟು  ಮುಂದಕ್ಕೆ ಕಳಿಸಿದರು.

 ವಿಮಾನದಲ್ಲಿ ಕುಳಿತ ತಕ್ಷಣ, ಅಜ್ಜಿಯವರು ಪ್ರಶ್ನೆಗಳ ಸುರಿ  ಮಳೆ ಹರಿಸಿದರು.

ಅದು ಯಾವ ಕಿಲಿಕೈ ?

ಅದನ್ನ ಯಾಕೆ ದಿಂಬಿನಲ್ಲಿ ಇಟ್ಟಿರುತ್ತೀರಿ ?

 ತಾತ ಹೇಳಿದರು:

“ನಾವು   ಬ್ಯಾಂಕಿನಲ್ಲಿ ನಮ್ಮ ಚಿನ್ನಾಭರಣಗಳನ್ನು ಇಡುವುದು ಬೇಡವೆಂದು ಹೇಳಿ ತಿಜೋರಿ ಕೊಂಡೆವಲ್ಲ ,ಅದರ ಕೀಲಿ ಕೈ. ಅದನ್ನು ಒಮ್ಮೆ ನನ್ನ ಪಾಕೆಟ್ ನಲ್ಲಿ ಇಟ್ಟುಕೊಂಡು ಹೋಗಿದ್ದೆ. ಆ ಪಾಕೆಟ್ ಅನ್ನು ಮರೆತು ಸ್ವಲ್ಪ ದೂರ ಬಂದುಬಿಟ್ಟಿದ್ದೆ .  ನಂತರ ಮತ್ತೆ ಹೋಗಿ ಪಾಕೆಟ್ ಅನ್ನು ನೋಡಿದಾಗ, ಅದೃಷ್ಟವಶಾತ್, ಈ ಕೀಲಿ ಕೈ   ಅದರಲ್ಲೇ  ಇತ್ತು, ಅಂದಿನಿಂದ, ಈ ದಿಂಬಿನಲ್ಲಿ ಒಂದು ಸಣ್ಣ ಚೀಲ ಹೊಲಿಸಿ ಅದರಲ್ಲೇ ಇಡುತ್ತಿದ್ದೇನೆ.ನಾವು ಎಲ್ಲಿ ಯಾರಾದರೂ ಹೋಗುವಾಗ ಈ ಕೀಲಿ ಕೈಯನ್ನು ಮನೆಯಲ್ಲಿ ಇಡುವುದು ಬೇಡವೆಂದು, ದಿಂಬನ್ನು ಎತ್ತಿಕೊಂಡು ಹೋಗುತ್ತೇನೆ”

ಎಂದರು.

ಪದಬಂಧ 

ರಚನೆ – ಡಾ || ಎ ಎಸ್ ಚಂದ್ರಶೇಖರ ರಾವ್ 

ಜವವರಿ ಪದಬಂಧ ಉತ್ತರಗಳು 

1 ಮರುಕಳಿಸು 

2 ಹರುಷ 

3 ಹೇಳಿಕೆ 

1 ಅಪಾನವಾಯು 

2 ಜೂಪಾನ 

3 ಅವಾಚ್ಯ 

ಸರಿ ಉತ್ತರ ಬರೆದವರು : ಶ್ರೀಮತಿ ಸೌಮ್ಯ ನಾಗರಾಜ್ . ಅವರಿಗೆ ಅಭಿನಂದನೆಗಳು.

ಈ ಸಂಚಿಕೆಯ ಪದಬಂಧ 

 

 

 

 

 

A  – ಸುಳುಹುಗಳು 

1)ಕನ್ನಡದ ದೇವತೆ, ಶಕ್ತಿ ದೇವತೆ, ಆದಿಶಕ್ತಿ.

2)ಯಾಗ, ಯಜ್ಞ . 

3) ಅರಳೀ ಮರ , ಅರಣಿ 

 

 

  B- ಸುಳುಹುಗಳು 

1)ಹುಡುಗಾಟ, ಕುಚೋದ್ಯ .

2) ಸಂದು, ಬಿರುಕು .

3) ಜೀವಂತಿಕೆ, ಗ್ರಹಣಶಕ್ತಿ,ಅರಿವು, ಆತ್ಮ.

<–ಮುಖ ಪುಟಕ್ಕೆ ವಾಪಸ್


0 Comments

Leave a Reply

Avatar placeholder

Your email address will not be published. Required fields are marked *